ಅವರ ಬ್ಲಾಗ್ http://obbakannadiga.blogspot.com/
ಕೆಲವನ್ನು ಒಪ್ಪಲಾಗದು ( ಮಹಾಪ್ರಾಣಗಳ ಕೈಬಿಡುವಿಕೆ, ವ್ಯಾಕರಣವನ್ನು ಬೇಗರಣ/ ವ್ಯಂಜನವನ್ನು ಬೆಂಜನ ಎನ್ನುವದು)
ಒಪ್ಪುವ ವಿಚಾರ.
ಒತ್ತಕ್ಕರ ಕಟ್ಟಳೆ :- ಒತ್ತು+ಅಕ್ಕರ ( ಒತ್ತು ಅಕ್ಷರ ). ಅಂದರೆ ಕನ್ನಡದಲ್ಲಿ ಒಂದು ಅಕ್ಕರವನ್ನು ಒತ್ತಿ ಹೇಳುವದನ್ನು, ಬರೆಯುವಾಗ, ಆ ಅಕ್ಕರದ ಕೆಳಗೆ ಅದೇ ಅಕ್ಕರವನ್ನು ಬರೆಯಲಾಗುತ್ತದೆ.ಉದಾ: ಕಲ್ಲು, ಮುಳ್ಳು, ಸುಳ್ಳು, ಅಕ್ಕರೆ, ಸಕ್ಕರೆ, ಅಗ್ಗ, ಹಿಗ್ಗು, ಸುಗ್ಗಿ, ನುಗ್ಗು, ಪಕ್ಕ, ಚುಕ್ಕ ಹೀಗೆ ಹಲವಾರು.ಪೊಳ್ಳು, ಗೊಳ್ಳು, ಗೊಡ್ಡು, ಮುತ್ತು, ಸುತ್ತು, ತುತ್ತು, ಕತ್ತು, ಕುತ್ತು, ಸೊತ್ತು. ಬಹಳ ಇವೆ.ಕಟ್ಟಳೆಯ ಉಲ್ಲಂಗನೆ :- ಒತ್ತಕ್ಕರ ಎಂಬ ಪದದಲ್ಲಿಯೇ 'ಒತ್ತು' ಇದೆ. ಅಂದರೆ ಆ ಅಕ್ಕರವನ್ನು ಒತ್ತಿ ಹೇಳುವುದು. ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರವನ್ನು ಬರೆದರೆ(ಉದಾ: ಪ್ರ), ಅದು ಬೆರಕೆಯಾಗುತ್ತದೆ, ಒತ್ತಕ್ಕರ ಹೇಗಾಗುತ್ತದೆ? ಇದರಲ್ಲಿ ತಪ್ಪಿದ್ದಲ್ಲಿ ತಿಳಿಸಿ.ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ ಇರುವ ಪದಗಳೆಲ್ಲವೂ ಹೊರಗಿನವೇ ಆಗಿವೆ. ಉದಾ: ಪತ್ರ, ಚಿತ್ರ, ಪಾತ್ರ, ವಿನಮ್ರ, ವಿಕ್ರಮ, ವಿಕ್ರಯ, ಹೀಗೆ ಬಹಳ ಪದಗಳು. ಈ ಪದಗಳು ಕನ್ನಡಿಗರಿಗೆ ಹೊಂದಿಲ್ಲ. ಟಪಾಲು, ಕಾಗದ(ಕಾಗಜ್ ನಿಂದ ಬಂದದ್ದು), ಇಂತವು ಹೊರಗಿನವಾದರೂ ಒತ್ತಕ್ಕರದ ಕಟ್ಟಳೆ ಕಾಪಾಡುವದರಿಂದ ಅವು ಬಲು ಬೇಗ ಕನ್ನಡದ ಪದಗಳಾಗಿವೆ.
......
ಹೀಗೆ, ಒಂದು ಅಕ್ಕರದಡಿ ಇನ್ನೊಂದು ಅಕ್ಕರ ಬರುವ ಯಾವುದೇ ಪದ ತೆಗೆದುಕೊಳ್ಳಿ, ಅದನ್ನವರು ನಿಯಮಾನುಸಾರ ತಿದ್ದಿಯೇ ಆಡುತ್ತಾರೆ. ಉದಾ; ಬರಹದಲ್ಲಿ ಬಹಳ ಸಾಮಾನಿಯಾಗಿ(ಸಾಮಾ 'ನ್ಯ' ವಾಗಿ) ಬಳಸುವ 'ಪ್ರಾಣ' ತೆಗೆದುಕೊಳ್ಳಿ, ಅದನ್ನವರು 'ಪಿರಾಣ', ಇಲ್ಲವೇ 'ಪರಾಣ' ಎನ್ನುತ್ತಾರೆ. 'ರಾತ್ರಿ' ಎಂಬುದನ್ನು 'ರಾತರಿ' ಎನ್ನುತ್ತಾರೆ. 'ಚಿತ್ರ' - ಚಿತ್ತಾರ. 'ಸ್ವಚ್ಛ' - ಸೊಚ್ಚ. ಸ್ವಲ್ಪ - ಸೊಲುಪ.
........
'ವ' ದ ಒಗಟುಕನ್ನಡದಲ್ಲಿ 'ವ' ದಿಂದ ಸುರುವಾಗುವ ಪದಗಳಿಲ್ಲ. 'ವ' ದಿಂದ ಸುರುವಾಗುವ ಪದಗಳೆಲ್ಲವೂ ಹೊರಗಿನವೇ.ವಿಮಾನ - ಇಮಾನ, ವಿಚಾರ - ಇಚಾರ, ವ್ಯವಸಾಯ - ಬೇಸಾಯ, ವ್ಯಂಜನ - ಬೆಂಜನ, ವ್ಯಾಕರಣ - ಬೇಗರಣವೆಂಕ - ಯಂಕ, ವೇದಿಕೆ - ಯೇದಿಕೆ, ವಿನಯ - ಇನಯಬರವಣಿಗೆಯಲ್ಲಿ 'ವ' ನ್ನು ಬೇರೆ ಅಕ್ಕರದೊಂದಿಗೆ ಬರೆದರೂ ಮಾತನಾಡುವಾಗ ಹೆಚ್ಚಿನ ಬಾರಿ, 'ಒ' ಆಗುವುದು.ಸ್ವಚ್ಚ - ಸೊಚ್ಚ, ಸ್ವಂತ - ಸೊಂತ, ಸ್ವಲ್ಪ - ಸೊಲುಪ, ಬಹುಸ ಈ ಪದಗಳನ್ನು ಮೊದಲು ಹೀಗೆಯೇ ಬರೆಯುತ್ತಿದ್ದರೇನೋ. ಸಕ್ಕದದ ಬೆನ್ನು ಬಿದ್ದ ಬರಹಗಾರರು, "ಒತ್ತಕ್ಕರದ ಕಟ್ಟಳೆ" ಯನ್ನು ಗಾಳಿಗೆ ತೂರಿದ್ದರಿಂದ ಅವು ಬದಲಾಗಿವೆ.ಸೊಕ್ಕು,ಸೊನ್ನೆ,ಸೊಲ್ಲು,ಸೊಪ್ಪು,ಸೊಂಡಿಲು,ಸೊಗಸು,ಸೊಗಡು ಈ ಪದಗಳಂತೆಯೇ ಮೇಲೆ ಮಾದರಿಸಿದ ಪದಗಳನ್ನು ಬರೆಯಬೇಕು.ಯಾವುದೇ ಕನ್ನಡ ಬರಹವನ್ನು ಓದುವಾಗ ನಡುವೆ ಬರುವ ಸಕ್ಕದದ, ಇಲ್ಲವೇ ಬೇರೆ ಯಾವುದೇ ನುಡಿಯ, ಹೆಚ್ಚಿನ ಪದಗಳು ಒತ್ತಕ್ಕರದ ಕಟ್ಟಳೆ ಯನ್ನು ಮೀರುವ ಇಲ್ಲವೇ ವ ದಿಂದ ಸುರುವಾಗುವ ಪದಗಳೇ ಆಗಿವೆ.
.......
ಮೈಸೂರು ಮಲ್ಲಿಗೆ : ಏಕೆ ಮೈಸೂರು ಮಲ್ಲಿಗೆ, ಎಲ್ಲರಿಗೂ ಹಿಡಿಸುವುದು? ಬರೆದು ಏಸು ಕಾಲವಾಗಿದ್ದರೂ ಅದರಲ್ಲಿ ಬರುವ ಹಾಡುಗಳು, ಎಲ್ಲರಿಗೂ ಮನಸ್ಸಿಗೆ ಮುದ ನೀಡುವವು.
ಬಳೆಗಾರ ಚೆನ್ನಯ್ಯನ ಹಾಡು
(
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು, ಬಳೆಯ ತೊಡಿಸುವುದಿಲ್ಲ ನಿಮಗೆ.
ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೇ, ತವರಿನಲಿ ತಾಯಿ ನಗುತಿಹರು
ಕುಡಿದ ನೀರಲುಗಿಲ್ಲ ಕೊರಗಿದರಿ ರಾಯರೇ, ಅವ್ವನಿಗೆ ಬಳೆಯ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ, ಓಲಗದು ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅವ್ವನಿಗೆ ತೌರಿನಲಿ, ಅಂಗಳದ ತುಂಬ ಜನವಿತ್ತು
ಸಿರಿಗೌರಿಯಂತೆ ಬಂದರು ತಾಯಿ, ಸೆರಗಿನಲಿ ಕಣ್ಣೀರನೊರಸಿ
ಸುಕದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ, ದೀಪದಲಿ ಬಿಡುಗಣ್ಣ ನಿಲಿಸಿ
ಬೇಕಾದ ಹಣ್ಣಿಹುದು ಹೂ ಇಹುದು ತೌರಿನಲಿ, ಹೊಸ ಸೀರೆ ರತುನದಾಬರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ, ನಿಮಗಿಲ್ಲ ಒಂದು ಹಣಿ ಕರುಣ
ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರಿಟ್ಟು ಕುದಿಯಬಾರದು ನನ್ನ ದೊರೆಯೆ
ಹಿಂಡ ಬಾರದು ದುಂಡು ಮಲ್ಲಿಗೆಯೆ ದಂಡೆಯನು, ಒಣಗಬಾರದು ಒಡಲ ಚಿಲುಮೆ
ಮುನಿಸು ಮಾವನ ಮೇಲೆ, ಮಗಳೇನ ಮಾಡಿದಳು, ನಿಮಗೇತಕೀ ಕಲ್ಲು ಮನಸು?
ಹೋಗಿ ಬನ್ನಿರಿ ಒಮ್ಮೆ, ಕೈ ಮುಗಿದು ಬೇಡುವೆನು, ಅವ್ವನಿಗೆ ನಿಮ್ಮದೇ ಕನಸು
ಬಳೆಗಾರ ಚೆನ್ನಯ್ಯ ....
)
ಏನು ಸೊಗಸಾಗಿದೆ!. ಇದನ್ನು ಗಮನಿಸಿದಾಗ, ಇದರಲ್ಲಿ ಸಕ್ಕದದ ಪದಗಳ ಬಳಕೆಯಾಗಲಿ, ಮಹಾಪ್ರಾಣಗಳ ಬಳಕೆಯಾಗಲಿ ಇಲ್ಲವೇ ಇಲ್ಲ, ಇದ್ದರೂ ಅವು ಕನ್ನಡದ ನೇಮಗಳನ್ನು ಪಾಲಿಸುತ್ತವೆ. ಏಕೆಂದರೆ "ಬೆರಕೆ ಪದಗಳು" (ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ) ಕನ್ನಡ ಹಾಡುಗಳಲ್ಲಿ ಹೊಂದುವದಿಲ್ಲ, ಮಾತನಾಡುವದರಲ್ಲೂ ಹೊಂದುವದಿಲ್ಲ.
------------------
No comments:
Post a Comment